ರಾಜ್ಯ ಸುದ್ದಿ

ಕಾಂಗ್ರೆಸ್ ಮೂರನೇ ಗ್ಯಾರಂಟಿ ಜಾರಿಗೆ ಕೌಂಟ್‌ಡೌನ್, ಇಂದಿನಿಂದಲೇ ‘ಅನ್ನ’ಭಾಗ್ಯದ ಜೊತೆಯಲ್ಲಿ ‘ಧನ’ ಭಾಗ್ಯ

Published

on

ಬೆಂಗಳೂರು, ಜು 01(Zoom Karnataka): ಅನ್ನಭಾಗ್ಯ ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಪ್ರತಿ ಬಡ ಕುಟುಂಬದ ಮನೆ ತಲುಪುವ ಯೋಜನೆ. ಹಸಿದ ಜನರ ಹೊಟ್ಟೆ ತುಂಬಿಸ್ತಿರೋ ‘ಅನ್ನ’ರಾಮಯ್ಯ ಕೊಟ್ಟರೋ ಭಾಗ್ಯ. ಇದೀಗ ಈ ಅನ್ನಭಾಗ್ಯ ಯೋಜನೆ ಜಾರಿಗೆ ಕೌಂಟ್‌ಡೌನ್ ಶುರುವಾಗಿದೆ. ಬಡಜನರ ಹಸಿವು ನೀಗಿಸುವುದರ ಜೊತೆಗೆ ಅವರ ಖಾತೆಗೆ ಹಣವು ಬೀಳಲಿದೆ. ಅಕ್ಕಿ ಬದಲಿಗೆ ಹಣ ಹಾಕುತ್ತಿರುವುದಕ್ಕೆ ಕೊಂಚ ಆಕ್ಷೇಪವೂ ವ್ಯಕ್ತವಾಗುತ್ತಿದೆ.

ಅಕ್ಕಿ ಸಿಗದ ಕಾರಣ ಅನ್ನಭಾಗ್ಯ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಪ್ಲಾನ್ ಬಿ ಮೊರೆ ಹೋಗಿದೆ. ಬಡವರ ಹೊಟ್ಟೆ ತುಂಬಿಸುವಷ್ಟು ಅಕ್ಕಿ ಸಿಗದೇ ಹಣ ಕೊಡಲು ಮುಂದಾಗಿದೆ. ಇತ್ತೀಚೆಗೆ ಮಹಿಳೆಯರಿಗೆ ಶಕ್ತಿ ಕೊಟ್ಟು, ಗೃಹಜ್ಯೋತಿ ಬೆಳಗಿಸಲು ಸಜ್ಜಾಗಿರುವ ಕಾಂಗ್ರೆಸ್​ ಈಗ ಮೂರನೇ ಗ್ಯಾರಂಟಿ ಅನ್ನಭಾಗ್ಯ ಜಾರಿ ಮಾಡುತ್ತಿದೆ.
ಇಂದಿನಿಂದಲೇ ‘ಅನ್ನ’ಭಾಗ್ಯದ ಜೊತೆ ‘ಧನ’ಭಾಗ್ಯ ಜಾರಿ

ಅಕ್ಕಿ ಕೊಡುತ್ತೇವೆ ಎಂದಿದ್ದ ಎಫ್‌ಸಿಐ ಕೊನೆ ಟೈಮಲ್ಲಿ ಕೈಕೊಟ್ಟಿತ್ತು. ನೆರೆ ರಾಜ್ಯಗಳ ನೆರವು ಕೇಳಿದ್ದ ಸರ್ಕಾರಕ್ಕೆ ಅಲ್ಲಿಯೂ ಅಕ್ಕಿ ಸಿಗದಾಗಿತ್ತು. ಕೊನೆಗೆ ಬಡವರ ಮನೆಗೆ ಅನ್ನಭಾಗ್ಯ ಯೋಜನೆಯ 5 ಅಕ್ಕಿ, ಇನ್ನುಳಿದ 5 ಕೆಜಿ ಅಕ್ಕಿ ಬದಲಿಗೆ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ತಲಾ 170 ರೂಪಾಯಿ ಕೊಡಲು ನಿರ್ಧರಿಸಿತ್ತು. ಈಗ ಪಡಿತರ ಚೀಟಿ ಹೊಂದಿರೋ ಫಲಾನುಭವಿಗಳಿಗೆ ಅನ್ನಭಾಗ್ಯದ ಜೊತೆ ಧನ ಭಾಗ್ಯ ನೀಡುವ ಯೋಜನೆಗೆ ಇಂದು ಚಾಲನೆ ಸಿಗಲಿದೆ. ಸಿದ್ದರಾಮಯ್ಯ ಸರ್ಕಾರ ಮೂರನೇ ಗ್ಯಾರಂಟಿಯನ್ನ ಇಂದು ಲಾಂಚ್ ಮಾಡಲಿದೆ.

ಇಂದಿನಿಂದಲೇ ಅನ್ನಭಾಗ್ಯ ಜಾರಿಯಾಗುವ ಬಗ್ಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಮಾಹಿತಿ ನೀಡಿದ್ದು, 5 ಕೆಜಿ ಅಕ್ಕಿ ಜೊತೆ ಪಡಿತರರ ಅಕೌಂಟ್‌ಗೆ ದುಡ್ಡು ಹಾಕಲಾಗುತ್ತೆ ಎಂದಿದ್ದಾರೆ.

ಕಾಂಗ್ರೆಸ್‌ನವರು ಆಡಿದ್ದ ಮಾತನ್ನ ತಪ್ಪಿದ್ದಾರೆ ಎಂದ ಆರಗ

ಇನ್ನೂ 5 ಕೆಜಿ ಅಕ್ಕಿ ಬದಲು ಹಣ ಕೊಡುತ್ತಿರುವುದಕ್ಕೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಸರಿ ಕಲಿಗಳು ಕಿಡಿಕಾರುತ್ತಿದ್ದಾರೆ. ಮೊದಲು 10 ಕೆಜಿ ಅಂತಾ ಹೇಳಿ ಈಗ 5 ಕೆಜಿ ಅಕ್ಕಿಗೆ ಹಣ ಕೊಡ್ತಿದ್ದಾರೆ. ಇದು ಕೈ ನಾಯಕರಿಗೆ 2 ನಾಲಿಗೆ ಇದೆ ಅಂತಾ ಬಿಜಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿಕಾರಿದ್ದಾರೆ. ಕಾಂಗ್ರೆಸ್‌ನವರು ಆಡಿದ್ದ ಮಾತನ್ನ ತಪ್ಪಿದ್ದಾರೆ ಅಂತಾ ಮಾಜಿ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ. ಆಗ 10 ಅಂದು ಈಗ ಐದು ಅಂತಿದ್ದಾರೆ ಅಂತಾ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಕೂಡಾ ಗುಡುಗಿದ್ದಾರೆ.

ಮೋದಿ ಕೊಟ್ಟಿದ್ದ ಭರವಸೆಗಳ ಈಡೇರಿಸಿ ಎಂದ ಡಿ. ಸುಧಾಕರ್‌

ಅಕ್ಕಿ ಬದಲಿಗೆ ಹಣ ನೀಡ್ತಿರೋ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನ ಬಿಜೆಪಿ ಟೀಕಿಸ್ತಿರೋದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಅನ್ನಭಾಗ್ಯ ಯೋಜನೆಯೇನೋ ಇಂದಿನಿಂದಲೇ ಜಾರಿ ಆಗಲಿದೆ. ಆದ್ರೆ, ಎಲ್ಲಾ ಪಡಿತರ ಚೀಟಿದಾರರ ಖಾತೆಗೆ ನಾಳೆಯೇ ಹಣ ಬೀಳೋದಿಲ್ಲ. ಬದಲಾಗಿ ಸಾಂಕೇತಿಕವಾಗಿ ಕೆಲವರ ಅಕೌಂಟ್‌ಗೆ ಹಣ ಹಾಕಲಾಗುತ್ತಿದೆ. ಬಳಿಕ ಹಂತ ಹಂತವಾಗಿ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಪಡಿತರ ಫಲಾನುಭವಿಗಳ ಖಾತೆಗೆ ಹಣ ಬೀಳೋ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

Trending

Exit mobile version