ತಾಜಾ ಸುದ್ದಿ

ಆರೋಗ್ಯ,ಪೌಷ್ಟಿಕ ಸಮೀಕ್ಷೆಯ ಹೊರೆ ಹಾಕಿ ಅಂಗನವಾಡಿ ನೌಕರರ ಆರೋಗ್ಯ ಕೆಡಿಸುವ ರಾಜ್ಯ ಸರಕಾರ – ಬಿ ಎಂ ಭಟ್

Published

on

ಆರೋಗ್ಯ,ಪೌಷ್ಟಿಕ ಸಮೀಕ್ಷೆಯ ಹೊರೆ ಹಾಕಿ ಅಂಗನವಾಡಿ ನೌಕರರ ಆರೋಗ್ಯ ಕೆಡಿಸುವ ರಾಜ್ಯ ಸರಕಾರ – ಬಿ ಎಂ ಭಟ್

ಜೂ 19 (Zoom Karnataka):ಅಂಗನವಾಡಿ ನೌಕರರಿಗೆ ಪದೇ ಪದೇ ಹೆಚ್ಚುವರಿ ಇಲಾಖೇತರ ಕೆಲಸ‌ ನೀಡಿ ಮಹಿಳಾ‌ ನೌಕರರ ಅನಾರೋಗ್ಯಕ್ಕೆ‌ ಕಾರಣವಾಗುವ ಮಹಿಳಾ ಇಲಾಖೆಯ ನಡೆ ಖಂಡನೀಯ. ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆಯ ಹೊರೆಯನ್ನು ಅಂಗನವಾಡಿ ನೌಕರರ ಮೇಲೆ ಹೊರಿಸಿ ಅವರ ಆರೋಗ್ಯವನ್ನು ಕೆಡಿಸಲು ರಾಜ್ಯ ಸರಕಾರ ಮುಂದಾಗಿದೆ ಎಂದು CITU ರಾಜ್ಯ ಸಮಿತಿ ಸದಸ್ಯರಾದ ಬಿ.ಎಂ.ಭಟ್ ರವರು ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಮಂಗಳೂರಿನ ಯುವವಾಹಿನಿ ಸಭಾಭವನದಲ್ಲಿ ಜರುಗಿದ ಅಂಗನವಾಡಿ ನೌಕರರ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತಾಡುತ್ತಿದ್ದರು.

ಮುಂದುವರಿಸುತ್ತಾ ಅವರು, ಕಳೆದ ಫೆಬ್ರವರಿಯಲ್ಲಿ ಸರಕಾರ ಆರೋಗ್ಯ ಮತ್ತು ಪೌಷ್ಟಿಕ ಸರ್ವೆ ಮಾಡಲು ನಮ್ಮ ಇಲಾಖೆಗೆ ಜವಾಬ್ದಾರಿ ನೀಡಿದ್ದನ್ನು ನಮ್ಮ ಸಂಘ ಪ್ರಬಲವಾಗಿ ವಿರೋದಿಸಿತ್ತು. ಚುನಾವಣೆ ನಿಮಿತ್ತ ಮುಂದೂಡಲ್ಪಟ್ಟ ಸರ್ವೆ ಕಾರ್ಯವನ್ನು ಈಗ ಮತ್ತೆ ಅಂಗನವಾಡಿ ನೌಕರರ ಮೇಲೆ ಹೊರಿಸಲು ಮುಂದಾಗಿದೆ.ನಮ್ಮ ಐಸಿಡಿಎಸ್ ಯೋಜನೆಯ ಕೆಲಸಗಳ ಹೊರೆಯೇ ಸಾಕಷ್ಟು ಇರುವಾಗ ಹೆಚ್ಚುವರಿ ಕೆಲಸ ಮಾಡೋದು ಹೇಗೆ ? ಜಗತ್ತಿನಲ್ಲಿ ಅತ್ಯಂತ‌ ಹೆಚ್ಚು ದುಡಿಯುವವರೆಂದರೆ ಮಹಿಳೆಯೇ. ಇಡೀ ಸಮಾಜ ಮಹಿಳೆಯ ಋಣ ತೀರಿಸಲಾಗದು.ಹೊಸ ಜೀವಿಯ ಜನನಕ್ಕೆ ಒಮ್ಮೆ ಸತ್ತು ಬದುಕುವ ಮಹಿಳೆಯರನ್ನು ಈ ರೀತಿ ಶೋಷಿಸುತ್ತಿರುವುದು ಯಾವುದೇ ಸರಕಾರಕ್ಕೆ ಶೋಬೆ ತರಲಾರದು ಎಂದು ಟೀಕಿಸಿದರು

CITU ಜಿಲ್ಲಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ, ಅಂಗನವಾಡಿ ನೌಕರರ ಬವಣೆಯನ್ನು ಸರಕಾರದ‌ ಗಮನಕ್ಕೆ ತಂದಿದ್ದರೂ ಅದಕ್ಕೆ ಸೂಕ್ತ ಉತ್ತರ ನೀಡದೆ, ಪರಿಹಾರವನ್ನೂ ಸೂಚಿಸದೆ, ಇಲಾಖೆ ಕೇವಲ ನೋಟೀಸು ಜಾರಿ ಮಾಡಿ ನೌಕರರನ್ನು ಬೆದರಿಸುವುದು ಮಹಿಳಾ ಶೋಷಣೆಯ ಪರಮಾವಧಿ ಎಂದು ಹೇಳಿದರು

DYFI ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳರವರು ಮಾತನಾಡಿ, ಅಂಗನವಾಡಿ ತಾಯಂದಿರ ಹೋರಾಟ ಇಡೀ ದೇಶಕ್ಕೆ ಮಾದರಿಯಾಗಿದ್ದು, ಯಾವುದೇ ಬದುಕಿನ ಪ್ರಶ್ನೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದರೆ ಜಿಲ್ಲೆಯ ಯುವಜನತೆ ಸದಾ ನಿಮ್ಮೊಂದಿಗೆ ಇದ್ದಾರೆ ಎಂಬ ಆತ್ಮವಿಶ್ವಾಸದ ಮಾತುಗಳ ಮೂಲಕ ಬೆಂಬಲ ಸಾರಿದರು.

ಸಮಾರೋಪ ಭಾಷಣ ಮಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ ಸರಕಾರದ ಎಲ್ಲಾ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಸಕ್ರೀಯ ಪಾತ್ರ ವಹಿಸುವ ಅಂಗನವಾಡಿ ನೌಕರರ ಪ್ರಶ್ನೆಗಳನ್ನು ಇತ್ಯರ್ಥ ಪಡಿಸಲು ಯಾವುದೇ ಸರಕಾರಗಳು ಗಂಭೀರ ಗಮನ ಕೊಡುತ್ತಿಲ್ಲ. ಮುಂಬರುವ ದಿನಗಳಲ್ಲಿ ದ.ಕ. ಜಿಲ್ಲೆಯಾದ್ಯಂತ ಬಲಿಷ್ಠ ಚಳುವಳಿಯನ್ನು ಕಟ್ಟಲು ಈ ಸಮಾವೇಶ ಮುನ್ನುಡಿ ಬರೆಯಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರವಿಕಲ ಬಂಟ್ವಾಳರವರು ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಮುಖಂಡರಾದ ಲಕ್ಷ್ಮಿ, ಗಾಯತ್ರಿದೇವಿ, ರೇಣುಕಾ, ವಸಂತಿ,ಸಾವಿತ್ರಿ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Trending

Exit mobile version