ತಾಜಾ ಸುದ್ದಿ

ಕಪ್ಪು ಹಣ ಹೊಂದಿರುವ ಕುಳಗಳಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಶಾಕ್

Published

on

ನವದೆಹಲಿ:ಕಪ್ಪು ಹಣ ಹೊಂದಿರುವ ಕುಳಗಳಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಶಾಕ್ ನೀಡಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ.

ಮೇ 23 ರಿಂದ ಸೆಪ್ಟೆಂಬರ್ 30ರ ವರೆಗೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಕಾನೂನುಬದ್ಧವಾಗಿ ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ. ಅಲ್ಲದೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಗ್ರಾಹಕರಿಗೆ ವಿತರಿಸದಂತೆ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ.

“ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ” ಎಂದಿರುವ ಆರ್ ಬಿಐ, 2000 ರೂಪಾಯಿ ನೋಟ್ ಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಿದೆ ಮತ್ತು ಒಂದು ಬಾರಿಗೆ 20 ಸಾವಿರ ರೂಪಾಯಿವರೆಗೆ ವಿನಿಮಯ ಮಾಡಿಕೊಳ್ಳಲು ಅಥವಾ ಜಮೆ ಮಾಡಲು ಅವಕಾಶ ನೀಡಿದೆ.

ನವೆಂಬರ್ 8, 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ 500 ಮತ್ತು 1,000 ರೂಪಾಯಿ ನೋಟ್ ಬ್ಯಾನ್ ಮಾಡುವುದಾಗಿ ಘೋಷಿಸಿದ್ದರು. ನೋಟು ಅಮಾನ್ಯೀಕರಣ ನೀತಿಯನ್ನು ಜಾರಿಗೆ ತರುವ ಮುಖ್ಯ ಕಾರಣ ಕಪ್ಪುಹಣಕ್ಕೆ(ಬ್ಲ್ಯಾಕ್‌ಮನಿ) ಕಡಿವಾಣ ಹಾಕುವುದು, ನಕಲಿ ನೋಟುಗಳನ್ನು ನಿರ್ಮೂಲನೆ ಮಾಡುವುದು ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮೂಲಕ ನಗದು ರಹಿತ ಆರ್ಥಿಕತೆಯನ್ನು ಸೃಷ್ಟಿಸುವುದು ಯೋಜನೆಯ ಗುರಿಯಾಗಿತ್ತು.

ಹಳೆ ನೋಟುಗಳನ್ನು ಬದಲಿಸಲು ಆರ್‌ಬಿಐ ಹೊಸ 500 ರ ನೋಟು ಮತ್ತು 2,000 ರೂಪಾಯಿ ನೋಟುಗಳನ್ನು ಪರಿಚಯಿಸಿತು. ಪ್ರಸ್ತುತ, ಆರ್‌ಬಿಐ ರೂ 2, ರೂ 5, ರೂ 10, ರೂ 20, ರೂ 50, ರೂ 100, ರೂ 200 ಮತ್ತು ರೂ 500 ಮತ್ತು ನೋಟುಗಳನ್ನು ಪೂರೈಸುತ್ತಿದೆ. ಆದರೆ ಆರ್ ಬಿಐ 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ನಾಲ್ಕು ವರ್ಷಗಳ ಹಿಂದೆಯೇ ನಿಲ್ಲಿಸಿದೆ.

Leave a Reply

Your email address will not be published. Required fields are marked *

Trending

Exit mobile version