ಜೂಮ್ ಪ್ಲಸ್

ಕೊಪ್ಪಳ ಜಿಲ್ಲೆಯ ಸಾರ್ವಜನಿಕರ, ಮಾಧ್ಯಮಗಳ ಸಹಕಾರ, ಅಧಿಕಾರಿ-ಸಿಬ್ಬಂದಿ ಶ್ರಮಕ್ಕೆ ಜಿಲ್ಲಾಡಳಿತಕೃತಜ್ಞ:ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು

Published

on

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಯಶಸ್ವಿ

ಕೊಪ್ಪಳ ಮೇ 14 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಯು ಕೊಪ್ಪಳ ಜಿಲ್ಲೆಯಲ್ಲಿ ಪಾರದರ್ಶಕವಾಗಿ ಮತ್ತು ಶಾಂತಯುತವಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರ ಸಹಕಾರ ಮತ್ತು ಶ್ರಮಕ್ಕೆ ಕೊಪ್ಪಳ ಜಿಲ್ಲಾಡಳಿತವು ಕೃತಜ್ಞತೆ ಸಲ್ಲಿಸುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
11,36,838 ಮತದಾರರು ಇರುವ ಕೊಪ್ಪಳ ಜಿಲ್ಲೆಯಲ್ಲಿ ಮೇ.10ರಂದು ಶಾಂತಿಯುತ ಮತದಾನ ನಡೆದು ಶೇ.78ರಷ್ಟು ಮತದಾನವಾಗಿದೆ. ಮತ ಎಣಿಕೆಯ ಎಲ್ಲ ಪ್ರಕ್ರಿಯೆಗಳು ಸಹ ಸುಗಮವಾಗಿ ನಡೆದು ಮೇ 13ರಂದು ಫಲಿತಾಂಶ ಪ್ರಕಟವಾಗಿದೆ. ಚುನಾವಣಾ ವೇಳಾಪಟ್ಟಿಯಂತೆ ಮಾರ್ಚ 29ರಂದು ನೀತಿ ಸಂಹಿತೆ ಜಾರಿಯಿಂದ ಆರಂಭಗೊಂಡು ಸುಧೀರ್ಘ 45 ದಿನಗಳ ಕಾಲ ನಿರಂತರವಾಗಿ ಒಂದಾದ ಮೇಲೊಂದರಂತೆ ಎಲ್ಲಾ ಪ್ರಕ್ರಿಯೆಗಳು ಯಾವುದೇ ಗೊಂದಲವಿಲ್ಲದೇ ಸುಗಮವಾಗಿ ನಡೆದು ಚುನಾವಣೆಯು ಶಾಂತರೀತಿಯಲ್ಲಿ ಯಶಸ್ವಿಯಾಗಿದ್ದು, ಇದಕ್ಕೆ ಕಾರಣೀಕರ್ತರಾದ ಕೊಪ್ಪಳ ಜಿಲ್ಲೆಯ ಎಲ್ಲಾ ಸಾರ್ವಜನಿಕರು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಚುನಾವಣಾ ಏಜೆಂಟರುಗಳು, ಅಭ್ಯರ್ಥಿಗಳ ಸಹಕಾರವನ್ನು ಜಿಲ್ಲಾಡಳಿತವು ಸ್ಮರಿಸುತ್ತದೆ.
ಚುನಾವಣೆ ಪ್ರಕ್ರಿಯೆ ಆರಂಭದಿಂದ ಮುಕ್ತಾಯದವರೆಗಿನ ಅನೇಕ ಚಟುವಟಿಕೆಗಳು ಹಾಗೂ ಮತದಾನ ಜಾಗೃತಿಯ ಸ್ವೀಪ್ ಕಾರ್ಯಕ್ರಮಗಳ ವರದಿ ಮತ್ತು ಮತದಾನ ಹಾಗೂ ಮತ ಎಣಿಕೆಯ ಫಲಿತಾಂಶ ಪ್ರಕಟಣೆ ಸೇರಿದಂತೆ ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಯಶಸ್ಸಿಗೆ ಕೊಪ್ಪಳ ಜಿಲ್ಲೆ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳ ಸಹಕಾರಕ್ಕೆ ಸಹ ಜಿಲ್ಲಾಡಳಿತ ಆಭಾರಿಯಾಗಿದೆ.
ಈ ವಿಧಾನಸಭಾ ಚುನಾವಣೆಯ ಸಿದ್ಧತಾ ಕಾರ್ಯಗಳು ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸುವ ಪೂರ್ವ ಸುಮಾರು ದಿನಗಳಿಂದಲೇ ಆರಂಭಗೊಂಡಿವೆ. ಅತ್ಯಂತ ಸೂಕ್ಷ್ಮ ಹಾಗೂ ನಿಯಮಿತವಾಗಿ ನಡೆಯಬೇಕಾದ ಈ ಚುನಾವಣೆಯು ಯಶಸ್ವಿಗೆ ಸಾವಿರಾರು ಅಧಿಕಾರಿಗಳು ಸಿಬ್ಬಂದಿ ಶ್ರಮಿಸಿದ್ದಾರೆ. 5 ವಿಧಾನಸಭಾ ಕ್ಷೇತ್ರಗಳ ಕ್ಷೇತ್ರ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಲ್ಲಾ ಏಳು ತಾಲೂಕುಗಳು ತಾಹಶೀಲ್ ಕಚೇರಿ, ತಾಲೂಕು ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಸಿಬ್ಬಂದಿ, ವಿವಿಧ ವಿಷಯಗಳ ನೋಡಲ್ ಅಧಿಕಾರಿಗಳು ಮತ್ತು ಅವರ ತಂಡಗಳ ಸದಸ್ಯರು, ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿ, ವೀಕ್ಷಕರುಗಳಿಗೆ, ಚುನಾವಣಾ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸಹ ಜಿಲ್ಲಾಡಳಿತವು ಧನ್ಯವಾದ ಸಲ್ಲಿಸುತ್ತದೆ.
ಜಿಲ್ಲೆಯಲ್ಲಿ ಮತದಾನದ ಕುರಿತು ವ್ಯಾಪಕವಾಗಿ ಮತ್ತು ವಿಭಿನ್ನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳು ಹಾಗೂ ಅವರ ನೇತೃತ್ವದ ಸ್ವೀಪ್ ತಂಡದ ಸದಸ್ಯರಿಗೆ ಮತ್ತು ಚುನಾವಣಾ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಶಾಂತಯುತವಾಗಿ ನಡೆಸಲು ಶ್ರಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ಅಭಿನಂದನೆಗಳು.
ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ತಂಡಗಳಾದ ಫ್ಲೆಯಿಂಗ್ ಸ್ಕ್ವಾಡ್, ಚೆಕ್ ಪೋಸ್ಟ್, ವಿಡಿಯೋ ಸರ್ವಲೆನ್ಸ್ ತಂಡಗಳ ಸದಸ್ಯರ ಕಾರ್ಯ ಮೆಚ್ಚುಗೆಯಾಗಿದೆ. ಒಟ್ಟಾರೆ ಚುನಾವಣೆಯ ಯಶಸ್ಸಿಗೆ ಸಹಕರಿಸಿದ ಇನ್ನೀತರ ಎಲ್ಲರಿಗೂ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version