ಅಂದು ಯುವರಾಜ್ ಸಿಂಗ್ ಆ ಒಂದು ಕೆಲಸವನ್ನ ಮಾಡದೇ ಇದ್ದಿದ್ರೆ, ಇಂದು ರೋಹಿತ್ ಶರ್ಮಾ ಟೀಮ್ ಇಂಡಿಯಾದಲ್ಲೇ ಇರುತ್ತಿರಲಿಲ್ಲ. ಈ ಬಾರಿಯ ವಿಶ್ವಕಪ್ನಲ್ಲಿ ರೋಹಿತ್ ಟೀಮ್ ಇಂಡಿಯಾದ ಕ್ಯಾಪ್ಟನ್. ಆದ್ರೆ, 2011ರಲ್ಲಿ ತಂಡದಲ್ಲೇ ಇರಲಿಲ್ಲ.. ಅಂದು ಕುಗ್ಗಿ ಹೋಗಿದ್ದ ರೋಹಿತ್, ಕಮ್ಬ್ಯಾಕ್ ಮಾಡಿದ ರೋಚಕ ಕಥೆಯೇ ಇವತ್ತಿನ ಸಖತ್ ಸ್ಟೋರಿ.
ಭಾರತದಲ್ಲಿ ನಡೆದ ವಿಶ್ವಕಪ್ ತಂಡದಲ್ಲಿ ಚಾನ್ಸೇ ಸಿಕ್ಕಿರಲಿಲ್ಲ
ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟಗೊಂಡಿದೆ. 15 ಸದಸ್ಯರ ತಂಡವನ್ನ ಆಯ್ಕೆ ಮಾಡಲಾಗಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಸ್ಫೋಟಕ, ಸ್ಮಾರ್ಟ್ ಕ್ಯಾಪ್ಟೆನ್ಸಿಯಿಂದ ಗಮನ ಸೆಳೆದಿರೋ ರೋಹಿತ್, ಟ್ರೋಫಿ ಗೆಲ್ಲಿಸಿಕೊಡ್ತಾರೆ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷೆಯಿಟ್ಟಿದ್ದಾರೆ. ಇಂದು ಯಾವ ಆಟಗಾರನ ಮೇಲೆ ಅಭಿಮಾನಿ ನಿರೀಕ್ಷೆಯಿಟ್ಟು ಕಾಯ್ತಿದ್ದಾರೋ ಆ ರೋಹಿತ್ಗೆ 2011ರಲ್ಲಿ ಅಂದ್ರೆ, ಭಾರತದಲ್ಲಿ ನಡೆದ ವಿಶ್ವಕಪ್ ತಂಡದಲ್ಲಿ ಚಾನ್ಸೇ ಸಿಕ್ಕಿರಲಿಲ್ಲ.
ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಮಾಜಿ ಆಟಗಾರ ರೋಹಿತ್ ಶರ್ಮಾ
2011ರ ಏಕದಿನ ವಿಶ್ವಕಪ್ ತಂಡದಿಂದ ಅಚ್ಚರಿಯ ರೀತಿಯಲ್ಲಿ ರೋಹಿತ್ ಶರ್ಮಾರನ್ನ ಡ್ರಾಪ್ ಮಾಡಲಾಗಿತ್ತು. ವಿಶ್ವಕಪ್ ಆಡೋ ಕನಸು ಕಂಡಿದ್ದ ರೋಹಿತ್ಗೆ ಇದ್ರಿಂದ ಸಹಜವಾಗಿಯೇ ತೀವ್ರ ನಿರಾಸೆಯಾಗಿತ್ತು. ಆಗ ರೋಹಿತ್, ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ರು. ಚಾನ್ಸ್ ಸಿಗದ್ದಕ್ಕೆ ಸಿಕ್ಕಾಪಟ್ಟೆ ಬೇಸರಗೊಂಡಿದ್ದ ರೋಹಿತ್ ಡಿಪ್ರೆಶನ್ಗೆ ಹೋಗಿದ್ರಂತೆ. ಆಗ ಹಿಟ್ಮ್ಯಾನ್ ಸಂತೈಸಿದ್ದು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್.
ಬೇಸರಗೊಂಡಿದ್ದ ರೋಹಿತ್ರನ್ನ ಒಂದು ದಿನ ಡಿನ್ನರ್ಗೆ ಕರೆದೊಯ್ದಿದ್ದ ಯುವರಾಜ್ ಸಿಂಗ್ ಸಮಾಧಾನ ಪಡಿಸಿದ್ರಂತೆ. ಸ್ಪೂರ್ತಿಯ ಮಾತುಗಳನ್ನ ಹೇಳಿ ಕ್ರಿಕೆಟ್ ಮೇಲಿನ ಆಸಕ್ತಿ ಕಳೆದುಕೊಂಡಿದ್ದ ರೋಹಿತ್ರನ್ನ ಮೋಟಿವೇಟ್ ಮಾಡಿದ್ರಂತೆ. ಟ್ಯಾಲೆಂಟ್ ಇದ್ದವರಿಗೆ ಸಾಧಿಸಲು ಇನ್ನೂ ಅವಕಾಶಗಳಿರುತ್ತೆ ಉದ್ವೇಗಕ್ಕೆ ಒಳಗಾಗಬೇಡ, ಅಭ್ಯಾಸ ಹಾಗೂ ಕಠಿಣ ಪರಿಶ್ರಮ ಮುಂದುವರೆಸು ಎಂದು ಯುವಿ ಕಿವಿಮಾತನ್ನ ಹೇಳಿದ್ರಂತೆ. ಅಂದು ಯುವರಾಜ್ ಹೇಳಿದ ಮಾತಿನಿಂದಲೇ ನನ್ನ ಕರಿಯರ್ ಬದಲಾಯ್ತು ಎಂದು ಸ್ವತಃ ರೋಹಿತ್ ಶರ್ಮಾ ಈಗ ಹೇಳಿಕೊಂಡಿದ್ದಾರೆ.