ಕರ್ನಾಟಕದ, ಬಂಟ್ವಾಳತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಊರು ವಿಟ್ಲ. ಇಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮೆಯ ದೇವಸ್ಥಾನಗಳಲ್ಲೆಲ್ಲ ಪ್ರಮುಖವಾದುದು ಮಾತ್ರವಲ್ಲದೇ ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇವಾಲಯಗಳು ಸುತ್ತುಮುತ್ತಲಿನಲ್ಲಿಲ್ಲ.
ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮಾ ಅರಸು ಮನೆತನದ ಆಡಳಿತಕ್ಕೊಳಪಟ್ಟಿದೆ.ಸೀಮೆಯ ಮುಖ್ಯಸ್ಥರು ವಿಟ್ಲದ ಅರಸರು.ಹಲವು ಶತಮಾನಗಳ ಇತಿಹಾಸವುಳ್ಳ ಡೊಂಬಹೆಗಡೆ ಅರಸು ಮನೆತನದವರು ವಿಟ್ಲದ ಅರಸರು.( ಡೊಂಬಹೆಗಡೆ ಎಂಬುದು ವಿಟ್ಲದ ಅರಸರು ಪಡೆಯುತ್ತಿದ್ದ ಬಿರುದು.ಈ ಅರಸು ವರ್ಗದವರಿಗೆ ಬಲ್ಲಾಳ ಎಂಬುದು ಉಪನಾಮ.) ಸೀಮೆಯ ಅರಸರಿಗೆ ಪಂಚಲಿಂಗೇಶ್ವರ ಆರಾಧ್ಯದೇವರು.ವಿಟ್ಲದ ಜಾತ್ರೆ ಮುಖ್ಯ ಉತ್ಸವ.ವಿಟ್ಲವು ಇಷ್ಠಕಾಪುರ ಎಂಬ ಹೆಸರಿನಿಂದಲೂ ಪ್ರಸಿಧ್ಧವಾಗಿತ್ತು.
ಪಂಚಲಿಂಗೇಶ್ವರ ಐದು ಪ್ರಾಕೃತಿಕ ಶಿಲಾಖಂಡಗಳನ್ನು ಏಕಪಾಣಿಪೀಠದ ಮೇಲೆ ಲಿಂಗಗಳಾಗಿ ಸ್ಥಾಪಿಸಿರುವುದರಿಂದ ಪಂಚಲಿಂಗೇಶ್ವರ ದೇವಾಲಯವೆನಿಸಿದೆ. ( ಶಿವನ ಸ್ವರೂಪಗಳಾದ ಸದ್ಯೋಜಾತ, ವಾಮದೇವ,ಅಘೋರ, ತತ್ಪುರುಷ, ಈಶಾನ)
ಉತ್ಸವಗಳು ವರ್ಷಾವಧಿ ಉತ್ಸವ ವಿಟ್ಲಾಯನವು ಮಕರಸಂಕ್ರಮಣದಂದು ಆರಂಭವಾಗಿ, ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಸುಮಾರು ಹತ್ತು ದಿನಗಳ ಮೊದಲು ಗೊನೆಕಡಿಯುವ ಮುಹೂರ್ತವಿರುತ್ತದೆ. ಮಕರಸಂಕ್ರಮಣದಂದು ಮಧ್ಯಾಹ್ನ ಅರಮನೆಯ ಅರಸರು, ಗುರಿಕಾರರು, ಊರ- ಪರಊರ ಜನರ ಉಪಸ್ಥಿತಿಯಲ್ಲಿ ಧ್ವಜಾರೋಹಣವಾಗುತ್ತದೆ.