ಮಂಗಳೂರು ನಂ 11 (ZoomKarnataka): ವಿಶ್ವ ಹಿಂದೂ ಪರಿಷತ್ ಬಜರಂಗದಳ ದೇರೆಬೈಲು ಕೊಂಚಾಡಿ ಖಂಡ ಸಮಿತಿಯ ನೇತೃತ್ವದಲ್ಲಿ ದ್ವಿತೀಯ ವರ್ಷದ ಸಾರ್ವಜನಿಕ ಗೋ ಪೂಜೆಯು
ಈ ತಿಂಗಳ 12 ರಂದು ಆದಿತ್ಯವಾರ ಬೆಳಿಗ್ಗೆ 9.00 ರಿಂದ 10.30 ರ ವರೆಗೆ ನಡೆಯಲಿದೆ. ಅದೇ ರೀತಿ ತುಡರ ಪರ್ಬ – 2023 ಕಾರ್ಯಕ್ರಮವು ಈ ತಿಂಗಳ 19 ರಂದು ಸಂಜೆ ಮೂರು ಗಂಟೆಯಿಂದ ಕೊಂಚಾಡಿ ದೇರೆಬೈಲು ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕ ದೇವಸ್ಥಾನದ
ವಠಾರದಲ್ಲಿ ಗೂಡು ದೀಪ ಸ್ಪರ್ಧೆಯೊಂದಿಗೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 3 ರಿಂದ ಸ್ಥಳೀಯ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ಕುಣಿತ ಭಜನೆ, ಚಿತ್ರಕಲಾ ಸ್ಪರ್ಧೆ ಹಾಗೂ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. 3:30 ಕ್ಕೆ ಗೂಡು ದೀಪ ಸ್ಪರ್ಧೆ ನಡೆಯಲಿದ್ದು, ಮುಂಚಿತವಾಗಿ ತಾವೇ ತಯಾರಿಸಿದ ಸಾಂಪ್ರದಾಯಿಕ
ಅಥವಾ ಆಧುನಿಕ ಗೂಡು ದೀಪವನ್ನು ತಂದು ಹೆಸರು ನೊಂದಾಯಿಸಿ, ಪ್ರದರ್ಶಿಸಬೇಕಾಗಿ ವಿನಂತಿ. ಸಂಜೆ 6 ಕ್ಕೆಸರಿಯಾಗಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಅತಿಥಿ ಗಣ್ಯರಿಂದ ಎಲ್ಲಾ ವಿಭಾಗದ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಹಾಗೂ ಐದು ಸಮಾಧಾನಕರ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ವಿತರಣೆ ನಡೆಯಲಿದೆ. ಗೂಡು ದೀಪ ಸ್ಪರ್ಧೆಯು ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗದಲ್ಲಿ ಸ್ಪರ್ಧೆಯಲ್ಲಿ ನಡೆಯಲಿದೆ. ಸಾಂಪ್ರದಾಯಿಕ ವಿಭಾಗದಲ್ಲಿ ಮೂಲೆಗಳಿರುವ ಗೂಡು ದೀಪ ಕಡ್ಡಾಯ. ಬಣ್ಣ ಕಾಗದ, ಗ್ಲಾಸ್ ಪೇಪರ್, ಬಟರ್ ಪೇಪರ್ ಅಥವಾ ಬಿದಿರು ಉಪಯೋಗಿಸತಕ್ಕದ್ದು, ಬೆಳಕು ಹೊರ ಚಿಮ್ಮುತ್ತಿರಬೇಕು. ಬಾಲ ಇರಲೇಬೇಕು, ನೆತಾಡಿಸುವುದಾಗಿರಬೇಕು. ಪ್ಲಾಸ್ಟಿಕ್, ಫ್ಲೆಕ್ಸ್, ಫೈಬರ್, ತರ್ಮ್ಕೊಳ್, ತೆಂಗಿನ ಗರಿ, ಹೂ, ಧಾನ್ಯ, ಮರ, ಗ್ಲಾಸ್, ಚಿಪ್ಪು, ಇತ್ಯಾದಿಗಳನ್ನು ಉಪಯೋಗಿಸಿದರೆ ಈ ವಿಭಾಗದಲ್ಲಿ ಪರಿಗಣಿಸಲಾಗುವುದಿಲ್ಲ. ಗೂಡುಗಳ ಸಂಖ್ಯೆ ಒಂದಕ್ಕಿಂತ ಹೆಚ್ಚು ಇರಬಾರದು. ಆಧುನಿಕ ವಿಭಾಗದಲ್ಲಿ ಯಾವುದೇ ಆಕಾರದ ವಿನ್ಯಾಸದ ಗೂಡು ಇರಬೇಕು. ಯಾವುದೇ ವಸ್ತುಗಳನ್ನು ಉಪಯೋಗಿಸಬಹುದು. ದೀಪ ಇರಲೇಬೇಕು, ಸಾಂಪ್ರದಾಯಿಕ ವಿಭಾಗದ ಅಪೇಕ್ಷಿತ ಅಂಶಗಳು ಇಲ್ಲದ ಗೂಡು ದೀಪಗಳನ್ನು ಆಧುನಿಕ ಎಂದು ಪರಿಗಣಿಸಲಾಗುವುದು. ಸ್ಥಳೀಯ ಬಾಲ ಕೇಂದ್ರದ ಮಕ್ಕಳ ವಿಭಾಗದಲ್ಲಿ ತಾವೇ ತಯಾರಿಸಿದ ಆಧುನಿಕ, ಸಾಂಪ್ರದಾಯಿಕ ಹಾಗೂ ಇನ್ನಿತರ ಯಾವುದೇ ತರಹದ ಗೂಡು ದೀಪವನ್ನು ಪ್ರದರ್ಶಿಸುವ ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು 8073429580 , 9480486552, 8431977461 ಗೆ ಸಂಪರ್ಕಿಸಬೇಕಾಗಿ ವಿನಂತಿ.