ಭಾರತ ಕಂಡ ಅದ್ಭುತ ಗಾಯಕಿ ಲತಾ ಮಂಗೇಶ್ಕರ್ ಅವರ ಕುಟುಂಬದ ಆಪ್ತರಿಂದ ಒಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ಕೊನೆಯ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರು ಶ್ರೀರಾಮನ ಭಜನೆ, ಶ್ಲೋಕಗಳನ್ನು ರೆಕಾರ್ಡ್ ಮಾಡಿದ್ದರಂತೆ. ರಾಮ ಮಂದಿರ ಉದ್ಘಾಟನೆ ವೇಳೆ ತಾವು ಹಾಡಿದ ಶ್ಲೋಕಗಳು, ಭಜನೆಗಳು ಪ್ರಸಾರ ಕಾಣಬೇಕು ಎಂಬುದು ಅವರ ಉದ್ದೇಶವಾಗಿತ್ತು. ಲತಾ ಮಂಗೇಶ್ಕರ್ ಮೃತಪಟ್ಟು ಹಲವು ಸಮಯದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಆ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿತ್ತು. 2024ರ ಜನವರಿ ತಿಂಗಳಲ್ಲಿ ರಾಮ ಮಂದಿರ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಈ ವಿಶೇಷ ಸಂದರ್ಭಕ್ಕಾಗಿ ಲತಾ ಮಂಗೇಶ್ಕರ್ ಅವರು ಭಜನೆಗಳನ್ನು ಸಿದ್ಧಪಡಿಸಿಟ್ಟಿದ್ದರು.
ಈ ವಿಚಾರವನ್ನು ಮಯೂರೇಶ್ ಪೈ ಕೂಡ ಖಚಿತಪಡಿಸಿದ್ದಾರೆ. ಅವರು ಲತಾ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ‘ಸಾಯುವವರೆಗೂ ಲತಾ ಅವರು ಹಾಡುತ್ತಲೇ ಇದ್ದರು. ರಾಮ ಮಂದಿರದಲ್ಲಿ ತಮ್ಮ ಧ್ವನಿ ಕೇಳಬೇಕು ಎಂಬುದು ಲತಾ ಅವರ ಆಸೆ ಆಗಿತ್ತು. ಈ ಕಾರಣಕ್ಕೆ ಆರೋಗ್ಯ ಕೈ ಕೊಡುತ್ತಿದ್ದ ಸಂದರ್ಭದಲ್ಲೇ ರೆಕಾರ್ಡಿಂಗ್ ಶುರುಮಾಡಿದ್ದರು.
ನಾನು ನೋಡಿದ ಧೈರ್ಯವಂತ ಮಹಿಳೆ ಅವರು’ ಎಂದಿದ್ದಾರೆ ಮಯೂರೇಶ್. ರಾಮ ಮಂದಿರ ಉದ್ಘಾಟನೆ ವೇಳೆ ಲತಾ ಮಂಗೇಶ್ಕರ್ ಅವರ ಹಾಡುಗಳು ಪ್ರಸಾರ ಕಾಣುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ವರ್ಷ ಫೆಬ್ರವರಿ 6ರಂದು ಲತಾ ಮಂಗೇಶ್ಕರ್ ಅವರು ಮೃತಪಟ್ಟರು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.