ನವದೆಹಲಿ ಓ 02 (Zoom Karnataka) : ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ವಿಮಾನದಲ್ಲಿದ್ದ ಐಎಎಸ್ ಅಧಿಕಾರಿ ಹಾಗೂ ವೈದ್ಯರೊಬ್ಬರು ಚಿಕಿತ್ಸೆ ನೀಡಿ ಮರುಜೀವ ನೀಡಿದ ಘಟನೆ ರಾಂಚಿ-ದೆಹಲಿ ನಡುವಿನ ವಿಮಾನದಲ್ಲಿ ನಡೆದಿದೆ.
ರಾಂಚಿಯಿಂದ ಮಗುವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ. ವಿಮಾನ ಹಾರಾಟದಲ್ಲಿದ್ದಾಗ ಮಗು ತೀವ್ರ ಉಸಿರಾಟದ ತೊಂದರೆ ಅನುಭವಿಸಿದೆ. ವಿಮಾನದ ಸಿಬ್ಬಂದಿ ವಿಚಾರ ತಿಳಿದು ಸಂತೈಸಲು ಯತ್ನಿಸಿದ್ದಾರೆ. ಬಳಿಕ 20 ನಿಮಿಷಗಳ ನಂತರ ಯಾರಾದರೂ ವೈದ್ಯರಿದ್ದರೆ ಸಹಕರಿಸುವಂತೆ ಸಿಬ್ಬಂದಿ ಕೇಳಿಕೊಂಡಿದ್ದಾರೆ.
ಈ ವೇಳೆ ಐಎಎಸ್ ಅಧಿಕಾರಿಯಾದ ಜಾರ್ಖಂಡ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಡಾ.ನಿತಿನ್ ಕುಲಕರ್ಣಿ ಮತ್ತು ರಾಂಚಿಯ ಸದರ್ ಆಸ್ಪತ್ರೆಯ ಡಾ. ಮೊಝಮ್ಮಿಲ್ ಫೆರೋಜ್ ಮಗುವನ್ನು ಉಳಿಸಲು ಮುಂದೆ ಬಂದಿದ್ದಾರೆ. ವಯಸ್ಕರಿಗೆ ಬಳಸುವ ಮಾಸ್ಕ್ ಬಳಸಿ ಆಮ್ಲಜನಕವನ್ನು ಒದಗಿಸಿದ್ದಾರೆ. ಬಳಿಕ ಮಗುವಿನ ಪೋಷಕರ ಬಳಿ ಇದ್ದ ಚುಚ್ಚುಮದ್ದನ್ನು ನೀಡಿ ಚಿಕಿತ್ಸೆ ನೀಡಿದ್ದಾರೆ. ಅವರ ಬಳಿ ಇಟ್ಟುಕೊಂಡಿದ್ದ ಚುಚ್ಚುಮದ್ದು ಬಹಳ ಸಹಾಯವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ವಿಮಾನ ಲ್ಯಾಂಡ್ ಆದ ಮೇಲೆ ವೈದ್ಯಕೀಯ ತಂಡವು ಮಗುವನ್ನು ತಮ್ಮ ಆರೈಕೆಗೆ ತೆಗೆದುಕೊಂಡಿತು. ಡಾ.ಮೊಝಮ್ಮಿಲ್ ಫೆರೋಜ್ ಹಾಗೂ ಡಾ.ನಿತಿನ್ ಕುಲಕರ್ಣಿ ಅವರ ಕಾರ್ಯಕ್ಕೆ ಜನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.