ಬೆಂಗಳೂರು ಸೆ 02 (Zoom Karnataka) : ಬಿಪಿಎಲ್ ಕಾರ್ಡ್ಗಳಿಗೆ ಸರ್ಕಾರ ಮೇಜರ್ ಸರ್ಜರಿ ಮಾಡಲು ಹೊರಟಿದೆ. ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ಜೊತೆಗೆ ಪುರುಷ ಮುಖ್ಯಸ್ಥರಿರುವ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಹೊರಟು ಶಾಕ್ ಕೊಟ್ಟಂತಾಗಿದೆ. ಇದರಿಂದ ಹಲವರಿಗೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಲಾಭ ಕೈತಪ್ಪುವ ಆತಂಕ ಎದುರಾಗಿದೆ. ಗ್ಯಾರಂಟಿಗಳ ಮೇಲೆ ಅಧಿಕಾರದ ಕುರ್ಚಿ ಏರಿದ್ದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿಗಳ ಮೇಲೆ ಒಂದೊಂದೇ ಷರತ್ತುಗಳನ್ನು ವಿಧಿಸುತ್ತಿದೆ. ತೆರಿಗೆ ಕಟ್ಟುವವರಿಗೆ ಗೃಹಲಕ್ಷ್ಮಿ ಭಾಗ್ಯ ಇಲ್ಲ ಎಂದಿದ್ದ ಸರ್ಕಾರ ಈಗ ಅನ್ನಭಾಗ್ಯ ಪಡೆಯುವ ಬಿಪಿಎಲ್ ಪಡಿತರದಾರರಿಗೂ ಶಾಕ್ ನೀಡಿದೆ.
ಬಿಪಿಎಲ್ ಕಾರ್ಡುದಾರರಿಗೆ ಮತ್ತೊಂದು ಬಿಗ್ ಶಾಕ್! ಗಂಡಸರು ಮುಖ್ಯಸ್ಥರಾಗಿದ್ರೆ ‘ಗ್ಯಾರಂಟಿ’ ಸಿಗಲ್ಲ ಅನ್ನಭಾಗ್ಯ!
10 ಕೆ.ಜಿ ಅನ್ನಭಾಗ್ಯ ಹಾಗೂ 2 ಸಾವಿರ ಲಕ್ಷ್ಮಿ ಭಾಗ್ಯ ಪಡೆಯುತ್ತಿದ್ದ ಮನೆ ಒಡತಿಯರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಹೊಸ ಪಡಿತರ ಚೀಟಿ ವಿತರಣೆ ಯಾವಾಗಿನಿಂದ ಆರಂಭ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಈಗಾಗಲೇ ಬಿಪಿಎಲ್ ಕಾರ್ಡ್ಗೆ ಸಲ್ಲಿಕೆಯಾದ ಅರ್ಜಿಗಳೂ ಕೂಡ ವಿಲೇವಾರಿಯಾಗಿಲ್ಲ. ಇದರ ನಡುವೆ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಬಿಪಿಎಲ್ ಕಾರ್ಡ್ಗಾಗಿ ಜನ ಅಲೆದಾಡ್ತಿದ್ದಾರೆ. ಈ ನಡುವೆ ಬಿಪಿಎಲ್ ಕಾರ್ಡುದಾರರಿಗೆ ಹೊಸ ಸಂಕಷ್ಟ ಎದುರಾಗಿದೆ. ನಿಮ್ಮ ಬಿಪಿಎಲ್ ಕಾರ್ಡ್ನಲ್ಲಿ ಮುಖ್ಯಸ್ಥಱರು ಅನ್ನೋದನ್ನ ಈಗಲೇ ನೋಡಿಕೊಳ್ಳಿ. ಒಂದು ವೇಳೆ ಗಂಡಸರು ಮುಖ್ಯಸ್ಥರಾಗಿದ್ದರೆ ಅನ್ನಭಾಗ್ಯವೂ ಸಿಗಲ್ಲ. ಮನೆಯೊಡತಿಗೆ ಗೃಹಲಕ್ಷ್ಮಿ ಭಾಗ್ಯವೂ ಸಿಗೋದಿಲ್ಲ. ಗಂಡಸರು BPL, APL ಕಾರ್ಡ್ನಲ್ಲಿ ಮುಖ್ಯಸ್ಥರಾಗಿದ್ದರೆ ಇನ್ಮುಂದೆ ಅನ್ನಭಾಗ್ಯ ಅಕ್ಕಿ ಸಿಗುವುದಿಲ್ಲ. ಜೊತೆಗೆ ಮನೆಯೊಡತಿಗೆ ಗೃಹಲಕ್ಷ್ಮಿ ಯೋಜನೆಯ ಲಾಭ ಕೂಡ ಸಿಗಲ್ಲ. ವಯಸ್ಕ ಮಹಿಳೆ ಮನೆಯಲ್ಲಿದ್ದು ಮನೆಯ ಮುಖ್ಯಸ್ಥ ಗಂಡಸರಾಗಿರುವವರಿಗೆ ಸರ್ಕಾರ ಶಾಕ್ ನೀಡಿದೆ.
ಒಂದು ವೇಳೆ ಕಾರ್ಡ್ನಲ್ಲಿರುವ ಮಹಿಳೆ 18 ವರ್ಷಕ್ಕಿಂತ ಕಮ್ಮಿ ಇದ್ದರೆ ಅವರಿಗೆ ಅವಕಾಶ ನೀಡಿದೆ. ಒಂದು ವೇಳೆ ಮನೆಯಲ್ಲಿ ಮಹಿಳೆಯರಿದ್ದು ಪುರುಷ ಮುಖ್ಯಸ್ಥನಾಗಿದ್ದರೂ ಅನ್ನಭಾಗ್ಯ ಸಿಗಲ್ಲ. ಮಹಿಳೆ ಮುಖ್ಯಸ್ಥೆ ಅಲ್ಲದಿದ್ದರೆ ಆಕೆಗೆ ಗೃಹಲಕ್ಷ್ಮಿ ಯೋಜನೆಯೂ ಸಿಗಲ್ಲ. ಗೃಹಲಕ್ಷ್ಮಿ ಯೋಜನೆಗೆ BPL, APL ಕಾರ್ಡ್ನಲ್ಲಿ ಮನೆಯೊಡತಿ ಹೆಸರು ಇರಲೇಬೇಕು. ಸದ್ಯ ಆಹಾರ ಇಲಾಖೆ ಪ್ರಕಾರ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಪುರುಷ ಮುಖ್ಯಸ್ಥರ ಕಾರ್ಡ್ಗಳಿವೆ ಎನ್ನಲಾಗಿದೆ.
ಸೆಪ್ಟೆಂಬರ್ 10ರವರೆಗೆ ಮುಖ್ಯಸ್ಥರ ಹೆಸರು ಬದಲಾವಣೆಗೆ ಅವಕಾಶ!
ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ನಲ್ಲಿ ಮಹಿಳೆಯರೇ ಮುಖ್ಯಸ್ಥರಾಗಿರಬೇಕು. ವಯಸ್ಕ ಮಹಿಳೆ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರೆಯಲಿದೆ. ಗೃಹಲಕ್ಷ್ಮಿ ಯೋಜನೆ ಪಡೆಯಲು ವಯಸ್ಕ ಮಹಿಳೆ ಇದ್ದೂ ಪುರುಷ ಮುಖ್ಯಸ್ಥ ಇರುವ ಕಾರ್ಡ್ನಿಂದ ಅರ್ಜಿ ಸಲ್ಲಿಕೆ ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿ ಮಹಿಳೆ ಇದ್ದರೂ ಗೃಹಲಕ್ಷ್ಮಿ ಭಾಗ್ಯ ಸಿಗದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಮನೆಯೊಡತಿ ಹೆಸರು ಬದಲಾವಣೆಗೆ ಸೆಪ್ಟೆಂಬರ್ 1ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಹತ್ತು ದಿನದಲ್ಲಿ ಹೆಸರು ಬದಲಾವಣೆ ಮಾಡಿಸಿಕೊಳ್ಳಲು ಸರ್ಕಾರ ಸೂಚಿಸಿದೆ.
ರೇಷನ್ ಕಾರ್ಡ್ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರನ್ನ ಸೇರಿಸುವುದು, ಯಾರಾದ್ರೂ ಮೃತಪಟ್ಟಿದ್ದರೆ ಅಂತಹವರ ಹೆಸರು ಡಿಲೀಟ್, ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆಗೆ ಆಹಾರ ಇಲಾಖೆ ಅವಕಾಶ ಕೊಟ್ಟಿದೆ. ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಓನ್ ಹಾಗೂ ಕರ್ನಾಟಕ ಓನ್ ಸೇರಿ ಇತರ ಕಡೆಗಳಲ್ಲಿ ರೇಷನ್ ಕಾರ್ಡ್ ಮಾರ್ಪಾಡು, ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. ರಾಜ್ಯದಲ್ಲಿ ಇನ್ಮುಂದೆ ಹೊಸ ಬಿಪಿಎಲ್ ಕಾರ್ಡ್ ಸಿಗೋದಿಲ್ಲ ಎನ್ನಲಾಗ್ತಿದೆ. ನಿಗದಿಗಿಂತ ಹೆಚ್ಚುವರಿಯಾಗಿ 13,27,882 ಬಿಪಿಎಲ್ ಕಾರ್ಡ್ ನೀಡಲಾಗಿದ್ದು ಸರ್ಕಾರಕ್ಕೆ ವರ್ಷದಿಂದ ವರ್ಷಕ್ಕೆ ಆರ್ಥಿಕ ಹೊರೆ ಬೀಳುತ್ತಿದೆ. ಹೀಗಾಗಿ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಸ್ಥಗಿತ ಮಾಡಲು ಆಹಾರ ಇಲಾಖೆ ಚಿಂತಿಸಿದೆ ಎನ್ನಲಾಗ್ತಿದೆ.
ಈ ಹಿಂದೆ ನಕಲಿ ದಾಖಲೆ ಕೊಟ್ಟು ಆರ್ಥಿಕವಾಗಿ ಸಬಲರು, ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿದ ಆಧಾರದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವ ನಿರೀಕ್ಷೆಯಿದೆ. ಹೃದಯ ಸಮಸ್ಯೆ ಸೇರಿ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಉಚಿತ ಹಾಗೂ ವಿಮಾ ಸೌಲಭ್ಯದಡಿ ಚಿಕಿತ್ಸೆಗೆ ಇವರಿಗೆ ಬಿಪಿಎಲ್ ಕಾರ್ಡ್ ಅತ್ಯಗತ್ಯವಿದೆ ಸರ್ಕಾರ ಈ ಬಗ್ಗೆ ಚಿಂತಿಸಿದೆ. ಒಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕಿದೆ. ಹೀಗಾದಲ್ಲಿ ಮಾತ್ರ ಸರ್ಕಾರ ಯೋಜನೆಗಳನ್ನು ತಂದಿದ್ದು ಸಾರ್ಥಕ ಎನಿಸಿಕೊಳ್ಳಲಿದೆ.