ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಏನಾದರೊಂದು ಹೊಸತನ್ನ ಮಾಡುತ್ತಿರುತ್ತಾರೆ ಮತ್ತು ಪರಿಚಯಿಸುತ್ತಿರುತ್ತಾರೆ. ಅದರಂತೆಯೇ ಇಂದು ಗುರುಪೂರ್ಣಿಮ. ಈ ಶುಭದಿನದಂದು ‘ನಾ ಕಂಡಂತೆ’ ಎಂಬ ಸರಣಿಯನ್ನು ತರುವುದಾಗಿ ಘೋಷಿಸಿದ್ದಾರೆ. ಟ್ವಿಟ್ಟರ್ನಲ್ಲಿ ಈ ಕುರಿತಾಗಿ ವಿಡಿಯೋ ಹಂಚಿಕೊಂಡಿದ್ದು, ಎಲ್ಲರನ್ನು ಭರಪೂರವಾಗಿ ಸ್ವಾಗತಿಸಿದ್ದಾರೆ.
ನಾ ಕಂಡಂತೆ- ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ‘ನಾ ಕಂಡಂತೆ’ ಎಂಬ ಒಂದು ಸಂವಾದಾತ್ಮಕ ಸರಣಿಯನ್ನು ಪ್ರಾರಂಭಿಸುತ್ತಿದ್ದಾರೆ. ಹೀಗಾಗಿ ತನ್ನ ಅಭಿಮಾನಿಗಳನ್ನು ಈ ಸಂವಾದ ಸರಣಿಯಲ್ಲಿ ಭಾಗಿಯಾಗಿ ಎಂದು ಬರಮಾಡಿಕೊಂಡಿದ್ದಾರೆ.
ಅಂದಹಾಗೆಯೇ, ಹಂಚಿಕೊಂಡ ದೃಶ್ಯದಲ್ಲಿ ಶೆಟ್ರು ಹಲವಾರು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಯಶಸ್ಸು, ಕನಸು, ಕಥೆಗಾರ, ಬೆಳ್ಳಿತೆರೆ, ಸಿನಿಮಾ ಜರ್ನಿ ಹಲವಾರು ವಿಚಾರಗಳನ್ನು ಮನದಟ್ಟು ಮಾಡಿದ್ದಾರೆ. ಅದರ ಜೊತೆಗೆ ರಕ್ಷಿತ್ ಶೆಟ್ಟಿ ಕಥೆಗಾರನಾಗಲು ಕಾರಣ ಇವೆಲ್ಲವನ್ನು ಹೇಳಿಕೊಂಡಿದ್ದಾರೆ.
ರಿಚರ್ಡ್ ಆ್ಯಂಟನಿ- ಪುಣ್ಯಕೋಟಿ ಸಿನಿಮಾದ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಶೆಟ್ರು
ರಕ್ಷಿತ್ ಶೆಟ್ಟಿ ಅವರ ಕನಸಿನ ಸಿನಿಮಾ ರಿಚರ್ಡ್ ಆ್ಯಂಟನಿ ಮತ್ತು ಪುಣ್ಯಕೋಟಿ. ಈ ಸಿನಿಮಾದ ಬಗ್ಗೆ ಕೆಲಸಗಳು ನಡೆಯುತ್ತಲೇ ಇವೆ. ಆದರೆ ಸಿನಿಮಾದ ಕುರಿತು ರಕ್ಷಿತ್ ಶೆಟ್ಟಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಕರಾವಳಿ ಸೃಷ್ಟಿಕರ್ತನಾದ ಪರಶುರಾಮ ಮತ್ತು ಆತನ ಕೊಡಲಿ ನನ್ನ ಮುಂಬರುವ ಸಿನಿಮಾಗಳಾದ ರಿಚರ್ಡ್ ಆ್ಯಂಟನಿ ಮತ್ತು ಪುಣ್ಯಕೋಟಿ ಸಿನಿಮಾಗೆ ಸ್ಫೂರ್ತಿ ಎಂದು ಹೇಳಿದ್ದಾರೆ.
ಅದೇನೆ ಇರಲಿ ರಕ್ಷಿತ್ ಶೆಟ್ಟಿ ತಾವು ಕಂಡದ್ದನ್ನು ಅಭಿಮಾನಿಗಳ ಮುಂದೆ ಹೇಳಲು ಹೊರಟಿದ್ದಾರೆ. ಗುರುಪೂರ್ಣಿಮೆಯ ದಿನದಂದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ನಾ ಕಂಡಂತೆ’ ಎಂದು ತಮ್ಮೊಳಗಿನ, ತಾವು ಕಂಡಂತಹ ವಿಚಾರ ಸತ್ಯತೆಗಳನ್ನು ಸರಣಿಯ ಮೂಲಕ ಮನಬಿಚ್ಚಿ ಹೇಳಲಿದ್ದಾರೆ.