‘ನಾಡಪ್ರಭು ಕೆಂಪೇಗೌಡ’ ಚಿತ್ರ ನಿರ್ಮಾಣಕ್ಕೆ ನಡೀತಿದೆ ಭರ್ಜರಿ ತಯಾರಿ.. ಚಂದನವನದಲ್ಲಿ ಮರುಕಳಿಸಲಿದೆ ಐತಿಹಾಸಿಕ ಗತವೈಭವ..!
ಬೆಂಗಳೂರು,ಜೂ 21(Zoom Karnataka)ಸ್ಯಾಂಡಲ್ವುಡ್ನಲ್ಲೊಂದು ಐತಿಹಾಸಿಕ ಚಿತ್ರಕ್ಕೆ ಸಿದ್ಧತೆ ನಡೀತಿದೆ. ಬೆಂದಕಾಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರ ಚರಿತ್ರೆ ಹೇಳೋಕೆ ಖ್ಯಾತ ನಿರ್ದೇಶಕರೊಬ್ಬರು ಪ್ಲಾನ್ ಮಾಡ್ಕೊಂಡಿದ್ದಾರೆ. ಹಾಗಾದ್ರೆ ಸ್ಯಾಂಡಲ್ವುಡ್ನಲ್ಲಿ ಕೆಂಪೇಗೌಡ ಆಗೋ ಚಾನ್ಸ್ ಯಾರಿಗೆ ಸಿಗುತ್ತೆ? ನಾಡಪ್ರಭು ಪಾತ್ರದಲ್ಲಿ ಯಾರು ನಟಿಸಿದ್ರೆ ಚೆನ್ನಾಗಿರುತ್ತೆ ಅನ್ನೋ ಪ್ರಶ್ನೋತ್ತರಗಳು ಶುರುವಾಗಿವೆ.
ಇವತ್ತು ನೀವು-ನಾವು ಸೇರಿದಂತೆ ಕೋಟ್ಯಾಂತರ ಜನರು ಬದುಕು ಕಟ್ಟಿಕೊಳ್ಳುತ್ತಿರುವ ಸುಂದರ ನಗರ ಬೆಂಗಳೂರು. ಇಂತಹ ಮಹಾನಗರವನ್ನು ಸೃಷ್ಟಿಸಿದ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡ. ಕೆಂಪೇಗೌಡರ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ. ಅಲ್ಲಲ್ಲಿ ಸಿನಿಮಾಗಳಲ್ಲಿಯೂ ಕೆಂಪೇಗೌಡರ ಸಾಹಸದ ಬಗ್ಗೆ ಕಣ್ತುಂಬಿಕೊಂಡಿದ್ದೇವೆ. ಇದೀಗ ಸ್ಯಾಂಡಲ್ವುಡ್ನಲ್ಲಿ ಕೆಂಪೇಗೌಡರ ಕುರಿತು ಪೂರ್ಣ ಪ್ರಮಾಣದ ಚಿತ್ರಕ್ಕೆ ಸಿದ್ಧತೆ ನಡೀತಿದೆಯಂತೆ. ಬೆಳ್ಳಿತೆರೆ ಮೇಲೆ ನಾಡಪ್ರಭು ಕಂಪೇಗೌಡರ ಚರಿತ್ರೆ ತೋರಿಸೋ ಯೋಜನೆ ಸಾಗ್ತಿದೆಯಂತೆ.
ಕೆಂಪೇಗೌಡರ ಬಗ್ಗೆ ಪೂರ್ಣ ಪ್ರಮಾಣದ ಸಿನಿಮಾವೊಂದು ಮಾಡ್ಬೇಕು ಅನ್ನೋದು ಘಟಾನುಘಟಿಗಳು ಆಸೆಯಾಗಿತ್ತು. ಸ್ವತಃ ಅಣ್ಣಾವ್ರು ಕೂಡ ಇಂಥಹದೊಂದು ಬಯಕೆ ಹೊಂದಿದ್ದರಂತೆ. ಕೆಂಪೇಗೌಡರ ಪಾತ್ರದಲ್ಲಿ ನಟಿಸಬೇಕು ಅಂತ ಡಾ.ರಾಜ್ ಕುಮಾರ್ ತುಂಬಾನೇ ಇಷ್ಟಪಟ್ಟಿದ್ರಂತೆ. ಅದರಂತೆ ನಿರ್ದೇಶಕ-ನಿರ್ಮಾಪಕರನ್ನು ಆಯ್ಕೆ ಮಾಡಿಕೊಂಡಿದ್ದ ಅಣ್ಣಾವ್ರು ಕಥೆ ರೆಡಿ ಮಾಡುವಂತೆ ಸೂಚಿಸಿದ್ದರಂತೆ. ಯಾವುದೇ ಕಾರಣಕ್ಕೂ ಇತಿಹಾಸಕ್ಕೆ ಧಕ್ಕೆ ಬಾರದಂತೆ ಸಿನಿಮಾ ಮಾಡ್ತೀರಾ ಅಂದ್ರೆ ನಟಿಸ್ತೀನಿ ಅಂತ ಷರತ್ತು ಹಾಕಿದ್ರಂತೆ.
ಆದ್ರೆ ಎಷ್ಟೇ ಪ್ರಯತ್ನ ಪಟ್ಟರೂ ಕಥೆ, ಚಿತ್ರಕಥೆ ಹಾಗೂ ಸೆಟ್ಗಳು ಇನ್ನಿತರ ಸವಾಲುಗಳಿಂದ ಅದು ಸಾಧ್ಯವಾಗಲಿಲ್ಲ ಅಂತ ಸ್ವತಃ ರಾಜ್ ಕುಮಾರ್ ಅವರ ಅಳಿಯ ರಾಮ್ ಕುಮಾರ್ ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದ್ರೀಗ ಮತ್ತೊಮ್ಮೆ ಕೆಂಪೇಗೌಡ ಸಿನಿಮಾ ಕಥೆ ಅಣ್ಣಾವ್ರ ಮನೆ ಬಾಗಿಲಿಗೆ ಹೋಗಿದೆ ಎಂಬ ಸುದ್ದಿ ಫಿಲ್ಮಿಫಸ್ಟ್ ತಂಡಕ್ಕೆ ಸಿಕ್ಕಿದೆ.
ಸ್ಯಾಂಡಲ್ವುಡ್ನಲ್ಲಿ ಯಾರಾಗ್ತಾರೆ ಕೆಂಪೇಗೌಡ?
ಅವತ್ತು ಅಣ್ಣಾವ್ರು ಕೆಂಪೇಗೌಡ ಕುರಿತು ಸಿನಿಮಾ ಮಾಡ್ಬೇಕು ಅಂತ ಅಂದ್ಕೊಂಡ್ರು. ಆದ್ರೆ ಅದು ನೆರವೇರಲಿಲ್ಲ. ಇದೀಗ ಮತ್ತೊಮ್ಮೆ ದೊಡ್ಮನೆಯೊಳಗೆ ಕೆಂಪೇಗೌಡ ಕಥೆಯ ಚರ್ಚೆ ಹುಟ್ಕೊಂಡಿದೆ ಎನ್ನಲಾಗುತ್ತಿದೆ. ಇಂಥ ಸಾಹಸಕ್ಕೆ ಕೈ ಹಾಕ್ತಿರೋದು ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ.
ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿಗಳ ಸರದಾರ, ಪ್ರಯೋಗಾತ್ಮಕ ಚಿತ್ರಗಳ ದಿಗ್ಗಜ ಟಿಎಸ್ ನಾಗಾಭರಣ ಅವರು ಬಹಳ ದಿನದಿಂದಲೂ ಕೆಂಪೇಗೌಡ ಕುರಿತಾದ ಕಥೆಯ ಮೇಲೆ ಕೆಲಸ ಮಾಡ್ತಿದ್ದಾರಂತೆ. ಬೆಂಗಳೂರ ದೊರೆಯ ಬಗ್ಗೆ ಸಿನಿಮಾ ಮಾಡಲೇಬೇಕು ಅಂತ ತಯಾರಿನೂ ನಡೆಸ್ತಿದ್ದಾರಂತೆ. ಅದಕ್ಕೆ ಅಗತ್ಯವಾದ ಸಂಶೋಧನೆ, ಮಾಹಿತಿ ಎಲ್ಲವನ್ನೂ ಸಂಗ್ರಹಿಸುತ್ತಿರುವ ನಾಗಾಭರಣ ಎಲ್ಲ ಅಂದುಕೊಂಡಂತೆ ಆದ್ರೆ ಆದಷ್ಟು ಬೇಗ ಈ ಸಿನಿಮಾಗೆ ಚಾಲನೆ ಕೊಡುವ ಲೆಕ್ಕಾಚಾರದಲ್ಲಿದ್ದಾರಂತೆ. ನಾಗಾಭರಣ ಅವರ ಕೆಂಪೇಗೌಡ ಕಥೆಯಲ್ಲಿ ನಾಯಕನಾಗೋದ್ಯಾರು ಅನ್ನೋದು ಈಗ ಕುತೂಹಲದ ಘಟ್ಟ. ಮನಸ್ಸು ಮಾಡ್ತಾರಾ ಅಣ್ಣಾವ್ರ ಮೊಮ್ಮಗ?
ನಾವು ಆಗ್ಲೇ ಹೇಳಿದಂತೆ ಕೆಂಪೇಗೌಡ ಕುರಿತಾದ ಸಿನಿಮಾ ಮಾಡುವ ಅವಕಾಶ ದೊಡ್ಮನೆವರೆಗೂ ಹೋಗಿದೆಯಂತೆ. ಹಾಗಾದ್ರೆ ದೊಡ್ಮನೆಯಲ್ಲಿ ಈ ಪಾತ್ರವನ್ನ ಯಾರು ಮಾಡ್ತಾರೆ ಅಂತ ನೋಡಿದ್ರೆ ಯುವರಾಜ್ ಕುಮಾರ್ ಎನ್ನುವ ಉತ್ತರ ಬರ್ತಿದೆ. ಟಿ.ಎಸ್.ನಾಗಾಭರಣ ಅವ್ರು ಯುವ ರಾಜ್ ಕುಮಾರ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಂಪೇಗೌಡ ಕಥೆಯನ್ನ ಸಿದ್ಧಪಡಿಸ್ತಿದ್ದಾರಂತೆ. ಯುವರಾಜ್ ಕುಮಾರ್ ಅವರ ಗಮನಕ್ಕೂ ಇದೆಯಂತೆ. ಈವರೆಗೂ ಈ ಬಗ್ಗೆ ಅಧಿಕೃತ ಚರ್ಚೆಯಾಗಿಲ್ಲ ಎನ್ನಲಾಗಿದೆ. ಒಂದು ವೇಳೆ ಟಿಎಸ್ ನಾಗಾಭರಣ ಅವ್ರು ಯುವರಾಜ್ ಕುಮಾರ್ ಈ ಪಾತ್ರಕ್ಕೆ ಸೂಕ್ತ ಎಂದಾದರೆ, ಅದೇ ರೀತಿ ಯುವರಾಜ್ ಕುಮಾರ್ ನಾನು ಈ ಪಾತ್ರ ಮಾಡಬಹುದು ಅಂತ ನಿರ್ಧರಿಸಿದ್ರೆ ಖಂಡಿತ ಈ ಪ್ರಾಜೆಕ್ಟ್ ಟೇಕ್ ಆಫ್ ಆಗುವ ಸಾಧ್ಯತೆ ಇದೆ. ಆದ್ರೆ ಈ ಬಗ್ಗೆ ಯುವ ಆಪ್ತರು ಹೇಳೋದೇ ಬೇರೆ. ಸದ್ಯಕ್ಕೆ ಇಂಥಹ ಯಾವುದೇ ಮಾತುಕಥೆ ಆಗಿಲ್ಲ, ಯುವ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಿದ್ದಾರೆ. ಅವರೂ ಕೂಡ ಈ ಬಗ್ಗೆ ಯೋಚಿಸಿಲ್ಲ. ಅಂತವ ಅವಕಾಶ ಬಂದಾಗ ನೋಡೋಣ ಬಿಡಿ ಅಂತಾರೆ. ಸ್ಯಾಂಡಲ್ವುಡ್ನಲ್ಲಿ ಕೆಂಪೇಗೌಡ ಕುರಿತಾದ ಕಥೆ ಸಿದ್ಧವಾಗ್ತಿರೋದಂತು ನಿಜ. ಅದಕ್ಕಾಗಿ ಟಿಎಸ್ ನಾಗಾಭರಣ ಅವರು ತಯಾರಿ ನಡೆಸ್ತಿರೋದು ನಿಜ.. ಬಟ್, ಇದು ಯುವರಾಜ್ ಕುಮಾರ್ ಪಾಲಾಗುತ್ತಾ? ಕಾಲವೇ ತಿಳಿಸಬೇಕು.