ಕನ್ನಡ ಚಿತ್ರರಂಗದಲ್ಲಿ ಬಹಳ ಯಶಸ್ಸು ಕಂಡ ಕೆ.ಜಿ.ಎಫ್, ಕೆ.ಜಿ.ಎಫ್ 2, ಕಾಂತಾರ, ಚಾರ್ಲಿ 777, ಗಂಧದಗುಡಿ, ವಕೀಲ್ ಸಾಬ್ ಮತ್ತು ದಸರಾ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡಿದ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಇದೀಗ ಆದಿಪುರುಷ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಕರ್ನಾಟಕದಲ್ಲಿ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಇದುವರೆಗೂ ಬಹಳ ಶ್ರದ್ದೆಯಿಂದ ಚಿತ್ರಗಳನ್ನು ಬಿಡುಗಡೆ ಮಾಡಿಕೊಂಡು ಬರುತ್ತಿರುವುದು ಕರ್ನಾಟಕದ ಜನತೆಗೆ ತಿಳಿದಿರುವ ವಿಷಯ. ಸದಭಿರುಚಿಯ ಚಿತ್ರಗಳನ್ನು ಸಿನಿಮಾ ಪ್ರೇಕ್ಷರಿಗೆ ತಲುಪಿಸುವ ಕೆ.ಆರ್.ಜಿ.ಸ್ಟುಡಿಯೋಸ್ ಸಂಸ್ಥೆ ತೊಡಗಿದೆ. ಈ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಆದಿಪುರುಷ್ ಆಗಲಿದೆ ಅನ್ನುವುದು ಸಂಸ್ಥೆಯ ನಂಬಿಕೆ.
ನಮ್ಮ ಹಿಂದೂ ಸಂಸ್ಕೃತಿಯ ಮಹಾಕಾವ್ಯ ಎಂದೇ ಹೇಳಲ್ಪಡುವ ಪವಿತ್ರ ಗ್ರಂಥ ರಾಮಾಯಣದ ಎಳೆಯನ್ನು ಆಧಿರಿಸಿ ತಯಾರಿಸಿರುವ ಚಿತ್ರ ಆದಿಪುರುಷ್. ಟಿ. ಸೀರೀಸ್ ಮತ್ತು ರೆಟ್ರೋಫಿಲ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕಥೆ ಹೆಣೆದು ನಿರ್ದೇಶನ ಮಾಡುತ್ತಿರುವುದು ಓಂ ರಾವತ್ ಅವರು. ಆದಿಪುರುಷ್ ಚಿತ್ರವು ಏಕಕಾಲಕ್ಕೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ಚಿತ್ರದ ತಾರಾಗಣದಲ್ಲಿ ಪ್ರಭಾಸ್, ಕ್ರಿತಿ ಸನೋನ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್, ದೇವದತ್ತ ನಾಗೇ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಆದಿಪುರುಷ್ ಚಿತ್ರದ ಕರ್ನಾಟಕ ವಿತರಣೆ ನಮಗೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ” ಎಂದು ಹೊಂಬಾಳೆ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರು ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರು ಆಗಿರುವ ಕಾರ್ತಿಕ್ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿರುವ ಸಾರವನ್ನು ಇಂದಿನ ಕಾಲಘಟ್ಟಕ್ಕೆ ಮತ್ತು ಇಂದಿನ ಪೀಳಿಗೆಗೆ ಅನುಗುಣವಾಗಿ ಆದಿಪುರುಷ್ ಚಿತ್ರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಚಿತ್ರವು ಪ್ರಭಾಸ್ ಮತ್ತು ಯು. ವಿ ಕ್ರಿಯೇಷನ್ಸ್ ಜೊತೆಗಿನ ಕೆ.ಆರ್.ಜಿ ಸ್ಟುಡಿಯೋಸ್ ಒಡನಾಟಕ್ಕೂ ಸಾಕ್ಷಿಯಾಗಲಿದೆ. ಆದಿಪುರುಷ್ ಚಿತ್ರ ಜೂನ್ 16 ರಂದು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ.