ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಪರಿಣಾಮ ನೀರಿನ ಸಮಸ್ಯೆ ತಲೆದೋರಿದೆ. ಮಳೆ ಬರುವ ನಿರೀಕ್ಷೆಯಲ್ಲಿರುವ ಜನರಿಗೆ ಮತ್ತಷ್ಟು ನಿರಾಸೆಯಾಗ್ತಿದ್ದು ಮೇ ತಿಂಗಳ ಅಂತ್ಯದೊಳಗಡೆ ಮಳೆ ಬಾರದಿದ್ರೆ ಮತ್ತಷ್ಟು ನೀರಿನ ಕೊರತೆ ಎದುರಾಗಲಿದ್ದು, ನೀರು ಪೂರೈಕೆಯಲ್ಲಿ ರೇಷನಿಂಗ್ ವ್ಯವಸ್ಥೆ ಅನಿವಾರ್ಯವಾಗಲಿದೆ. ಹೀಗಾಗಿ ಶುಕ್ರವಾರದಂದು ಮಳೆಗಾಗಿ ಎಲ್ಲಾ ಮಸೀದಿಗಳಲ್ಲಿ
ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಕವಿ, ಲೇಖಕ, ಪತ್ರಕರ್ತ, ನಿರೂಪಕ, 11 ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ, ಸಂಶೋಧಕ, ಶಂಶೀರ್ ಬುಡೋಳಿ ಮನವಿ ಮಾಡಿದ್ದಾರೆ. ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಇವರು, ಈಗಾಗಲೇ ಕಡು ಬಿಸಿಲಿನ ಬೇಗೆಯನ್ನು ಎದುರಿಸಿರುವ ಜನರು ಹೈರಾಣಾಗಿದ್ದಾರೆ. ವಾಡಿಕೆಯಂತೆ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಮಳೆ ಬರಬೇಕಿತ್ತು. ಆದರೆ ಮಳೆ ಬಂದಿಲ್ಲ. ಒಂದು ವೇಳೆ ಮೇ ಅಂತ್ಯದ ಒಳಗಡೆ ಮಳೆ ಬಾರದಿದ್ರೆ ಮತ್ತಷ್ಟು ಸಂಕಷ್ಟ ಎದುರಾಗಬಹುದು. ಹೀಗಾಗಿ ಜಿಲ್ಲಾಡಳಿತ ಕೂಡಾ ನೀರಿನ ಕೊರತೆಯಾಗದಂತೆ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಕೆಲ ನದಿಗಳ ಒಡಲು ಬತ್ತಿ ಹೋಗಿದ್ದು ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಅನೇಕ ಕಡೆಗಳಲ್ಲಿ ಬೋರ್ ವೆಲ್ ಗಳಲ್ಲಿ ಕೂಡಾ ನೀರು ಬತ್ತಿ ಹೋಗಿದೆ. ಕೆಲ ನದಿಗಳ ನೀರಿನ ಒಳಹರಿವು ನಿಂತು ಹೋಗಿರುವ ವರದಿಗಳು ಪ್ರಕಟವಾಗಿವೆ. ಹೀಗಾಗಿ ಅಣೆಕಟ್ಟುಗಳಲ್ಲಿ ಕೂಡಾ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು ಸಾರ್ವಜನಿಕರಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಇದು ಗಂಭೀರ ವಿಚಾರವಾಗಿದ್ದು ನೀರಿಗಾಗಿ ಯಾವುದೇ ಸಾವು ನೋವು ಆಗದಂತೆ ನೋಡಿಕೊಳ್ಳಬೇಕು. ಜನರ ಬವಣೆ ನೀಗಿಸಲು ಮಳೆ ಬರಲೇಬೇಕು. ಕುಡಿಯುವ ನೀರಿಗಾಗಿ ಪರಿತಪಿಸುವ ಜನರ ಕಷ್ಟಕ್ಕೆ ಅಲ್ಲಾಹನು ಕೃಪೆ ತೋರಲಿ. ಹೀಗಾಗಿ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರದಂದು ಸಾಮೂಹಿಕ ನಮಾಝ್ ವೇಳೆ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.